ಬೆಂಗಳೂರು: ಗೃಹಲಕ್ಷ್ಮಿ, ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಮುಂಬರುವ ದಿನಗಳಲ್ಲಿ ಫಲಾನುಭವಿಗಳಿಗೆ ಹೊಸ ನಿಯಮದ ಬಗ್ಗೆ ಚರ್ಚೆ ನಡೆದಿದ್ದು, ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗುವ ಸಾಧ್ಯತೆ ಇದೆ. ಹಾಗಾದರೆ ಇದಕ್ಕೆ ಕಾರಣವೇನು?
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಡಿ ಲಕ್ಷಾಂತರ ಮಹಿಳೆಯರು ಪ್ರತಿ ತಿಂಗಳು ಆರ್ಥಿಕ ನೆರವಿಗಾಗಿ ರೂ.2,000/- ಪಡೆಯುತ್ತಿದ್ದಾರೆ. ಕುಟುಂಬದ ಆರ್ಥಿಕ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಈ ಯೋಜನೆ ಈಗ ಹೊಸ ಹಂತದ ಪರಿಶೀಲನೆಗೆ ಒಳಗಾಗುವ ಸಾಧ್ಯತೆ ಕಂಡುಬಂದಿದೆ.
ಯೋಜನೆಯ ಲಾಭ ನಿಜವಾದ ಅರ್ಹರಿಗೆ ಮಾತ್ರ ತಲುಪಿಸುವ ಉದ್ದೇಶದಿಂದ ಅನರ್ಹ ಫಲಾನುಭವಿಗಳನ್ನು ಗುರುತಿಸುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಬಯೋಮೆಟ್ರಿಕ್ ಆಧಾರಿತ ಪರಿಶೀಲನೆ ಜಾರಿಗೆ ತರಲು ಚರ್ಚೆಗಳು ನಡೆಯುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಯೋಜನೆಯ ವ್ಯಾಪ್ತಿ ಎಷ್ಟು?
ಪ್ರಸ್ತುತ ರಾಜ್ಯದಾದ್ಯಂತ ಒಂದು ಕೋಟಿಗೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುವ ಈ ನೆರವು ಅನೇಕ ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿ ಪರಿಣಮಿಸಿದೆ.
ಆದರೆ ಇತ್ತೀಚಿನ ಪರಿಶೀಲನೆಗಳಲ್ಲಿ ಕೆಲವು ಅಕ್ರಮಗಳು ಹಾಗೂ ಅನರ್ಹ ಫಲಾನುಭವಿಗಳ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳತ್ತ ಗಮನ ಹರಿಸಿದೆ ಎಂದು ತಿಳಿದು ಬಂದಿದೆ.
ಬಯೋಮೆಟ್ರಿಕ್ ಪರಿಶೀಲನೆ ಯಾಕೆ?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಸಮೀಕ್ಷೆಗಳು ಹಾಗೂ ಸ್ಥಳೀಯ ಮಟ್ಟದ ಪರಿಶೀಲನೆಗಳಲ್ಲಿ ಕೆಲವು ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ.
- ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲೂ ಹಣ ಜಮೆಯಾಗುತ್ತಿರುವುದು,
- ಆದಾಯ ತೆರಿಗೆ ಪಾವತಿಸುವ ಕುಟುಂಬಗಳ ಸದಸ್ಯರು ಯೋಜನೆಯ ಲಾಭ ಪಡೆಯುತ್ತಿರುವುದು ಮತ್ತು
- ಆಧಾರ್ ಸೀಡಿಂಗ್ ಪೂರ್ಣಗೊಳಿಸದ ಖಾತೆಗಳಿಗೂ ನೆರವು ಸಾಗುತ್ತಿರುವುದು ಪತ್ತೆಯಾಗಿದೆ.
ಈ ಸುದ್ದಿಯನ್ನು ಓದಿ : 15 ಸಾವಿರ ಶಿಕ್ಷಕರ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮೋದನೆ; 100 ದಿನಗಳಲ್ಲಿ ಭರ್ತಿ ಗುರಿ.
ಈ ಹಿನ್ನೆಲೆಯಲ್ಲಿ ಫಲಾನುಭವಿಗಳು ತಮ್ಮ ಗುರುತನ್ನು ಮತ್ತೊಮ್ಮೆ ದೃಢೀಕರಿಸುವ ವ್ಯವಸ್ಥೆಯನ್ನು ರೂಪಿಸಲು ಇಲಾಖೆ ಮುಂದಾಗಿದೆ ಎನ್ನಲಾಗಿದೆ.
ದೃಢೀಕರಣ ವಿಧಾನಗಳಾವವು?
ಹೊಸ ವ್ಯವಸ್ಥೆಯಡಿ ಫಲಾನುಭವಿಗಳು ತಮ್ಮ ಜೀವಂತಿಕೆ ಹಾಗೂ ಅರ್ಹತೆಯನ್ನು ದೃಢೀಕರಿಸಲು ಹೆಬ್ಬೆರಳಿನ ಗುರುತು, ಕಣ್ಣಿನ ಐರಿಸ್ ಸ್ಕ್ಯಾನ್ ಅಥವಾ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆ ಇದೆ. ಇದರಿಂದ ನಕಲಿ ಖಾತೆಗಳು ಮತ್ತು ಅನರ್ಹ ಫಲಾನುಭವಿಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ.
ಈ ಸೇವೆ ಎಲ್ಲೇಲ್ಲಿ ಲಭ್ಯವಿದೆ?
- ಬೆಂಗಳೂರು ಒನ್,
- ಕರ್ನಾಟಕ ಒನ್,
- ಗ್ರಾಮ ಒನ್,
- ಬಾಪೂಜಿ ಸೇವಾ ಕೇಂದ್ರಗಳು ಹಾಗೂ
- ಸಾಮಾನ್ಯ ಸೇವಾ ಕೇಂದ್ರ.
ಇವುಗಳ ಮೂಲಕ ಈ ಪ್ರಕ್ರಿಯೆ ನಡೆಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಫಲಾನುಭವಿಗಳು ಆಧಾರ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗಬಹುದು.
ಸರ್ಕಾರದ ಉದ್ದೇಶ ಏನು?
- ಈ ಕ್ರಮದ ಪ್ರಮುಖ ಉದ್ದೇಶ ಯೋಜನೆಯ ಹಣ ಸರಿಯಾದ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸುವುದಾಗಿದೆ.
- ಸರ್ಕಾರದ ಅನುದಾನ ದುರುಪಯೋಗವಾಗದಂತೆ ತಡೆಯುವುದು ಹಾಗೂ
- ಸಾರ್ವಜನಿಕ ಹಣದ ಪಾರದರ್ಶಕ ಬಳಕೆಯನ್ನು ಖಾತ್ರಿಪಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
ಮಹಿಳೆಯರ ಪ್ರತಿಕ್ರಿಯೆ :
ಯೋಜನೆಯ ಹಣ ನಿಯಮಿತವಾಗಿ ದೊರಕಿದರೆ ಹೆಚ್ಚುವರಿ ಪರಿಶೀಲನೆಗೆ ತಾವು ಸಿದ್ಧ ಎಂದು ಅನೇಕ ಮಹಿಳೆಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಗ್ರಾಮೀಣ ಪ್ರದೇಶದ ಮಹಿಳೆಯರು ಸೇವಾ ಕೇಂದ್ರಗಳಿಗೆ ಪದೇಪದೇ ತೆರಳಬೇಕಾಗುವ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್; ಈ ಕೆಲಸ ಮಾಡದಿದ್ದರೆ ಹಣ ಕಟ್.
ಸರ್ಕಾರದಿಂದ ಅಧಿಕೃತ ಆದೇಶ ಅಥವಾ ಮಾರ್ಗಸೂಚಿ ಪ್ರಕಟವಾದ ಬಳಿಕವೇ ಈ ಹೊಸ ವ್ಯವಸ್ಥೆಯ ಸಂಪೂರ್ಣ ವಿವರಗಳು ಸ್ಪಷ್ಟವಾಗಲಿವೆ. ಸದ್ಯಕ್ಕೆ ಫಲಾನುಭವಿಗಳು ತಮ್ಮ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಮತ್ತು ಇಲಾಖೆಯ ಅಧಿಕೃತ ಮಾಹಿತಿಯನ್ನು ಗಮನಿಸುವುದು ಸೂಕ್ತ.
ಈ ಕ್ರಮದ ಪರಿಣಾಮ ಏನು?
ತಜ್ಞರ ಅಭಿಪ್ರಾಯದ ಪ್ರಕಾರ, ಬಯೋಮೆಟ್ರಿಕ್ ಪರಿಶೀಲನೆಯಿಂದ ಯೋಜನೆಯ ದುರುಪಯೋಗವನ್ನು ತಡೆದು, ಅರ್ಹ ಫಲಾನುಭವಿಗಳಿಗೆ ಮಾತ್ರ ನೆರವು ತಲುಪುವಂತೆ ಮಾಡಲು ಸಾಧ್ಯವಾಗುತ್ತದೆ.
ಆದರೆ ಗ್ರಾಮೀಣ ಪ್ರದೇಶದ ಮಹಿಳೆಯರು ಹಾಗೂ ವಯೋವೃದ್ಧರಿಗೆ ಸೇವಾ ಕೇಂದ್ರಗಳಿಗೆ ತೆರಳಿ ಪರಿಶೀಲನೆ ಮಾಡಿಸಿಕೊಳ್ಳುವುದು ಕೆಲವೊಮ್ಮೆ ಸವಾಲಾಗಬಹುದು.
ತಾಂತ್ರಿಕ ದೋಷಗಳು ಅಥವಾ ಸರ್ವರ್ ಸಮಸ್ಯೆಗಳು ಉಂಟಾದರೆ ಹಣ ಜಮೆಯಾಗುವಲ್ಲಿ ವಿಳಂಬವಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಹೊಸ ವ್ಯವಸ್ಥೆ ಜಾರಿಗೊಳಿಸುವ ವೇಳೆ ಸರ್ಕಾರ ಸುಲಭ ಮತ್ತು ಜನಸ್ನೇಹಿ ವಿಧಾನಗಳನ್ನು ಅನುಸರಿಸುವುದು ಅಗತ್ಯವಾಗಿದೆ.
Source: ZEE News ಕನ್ನಡ
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ





