ಡೆಸ್ಕ್ : ಸದ್ಯ ದೇಶದಲ್ಲಿ ಶೇ.64ರಷ್ಟು ಮುಂಗಾಗು (ಮಾನ್ಸೂನ್) ಮಳೆ ಕೈಕೊಟ್ಟಿದ್ದು, ರೈತರಲ್ಲಿ ಆತಂಕದ ಛಾಯೆ ಮೂಡಿದೆ. ಇಂದು ಉಪಗ್ರಹ ಚಿತ್ರದಲ್ಲಿ ದಾಖಲಾದ ಮುಂಗಾರು ಮಾರುತದ ದೃಶ್ಯ ಬೆಚ್ಟಿಬೀಳಿಸುವಂತಿದೆ. ಇಷ್ಟಾದರೂ ಕೂಡ ಶೀಘ್ರದಲ್ಲಿಯೇ ಮತ್ತೇ ಮುಂಗಾರು ಮರುಸಂಘಟನೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ದೇಶದ ಬಹುತೇಕ ಭಾಗಗಳಲ್ಲಿ ನಿರೀಕ್ಷೆ ಮೂಡಿಸಿದ್ದ ನೈಋತ್ಯ ಮುಂಗಾರು ಇದೀಗ ಏಕಾಏಕಿ ದುರ್ಬಲಗೊಂಡಿದ್ದು, ಹಲವು ರಾಜ್ಯಗಳಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿದಿದೆ. ಭಾರತೀಯ ಹವಾಮಾನ ಪರಿಸ್ಥಿತಿಯನ್ನು ಗಮನಿಸಿದ ತಜ್ಞರು, ಈ ಬೆಳವಣಿಗೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಹಾಗೂ ಮಧ್ಯ ಭಾರತದ ಹಲವು ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಪ್ರವೇಶಿಸಿದ್ದ ಮಾನ್ಸೂನ್ ಮಾರುತಗಳು ಕಳೆದ ಕೆಲವು ದಿನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಸಲು ವಿಫಲವಾಗಿವೆ.
ಭಾರತೀಯ ಹವಾಮಾನ ಇಲಾಖೆಯ ಲಭ್ಯ ಅಂಕಿಅಂಶಗಳ ಪ್ರಕಾರ, ಜೂನ್ ಮೊದಲ ವಾರದಿಂದ ಮಧ್ಯಭಾಗದವರೆಗೆ ದೇಶದಲ್ಲಿ ಸಾಮಾನ್ಯವಾಗಿ ದಾಖಲಾಗಬೇಕಾದ ಮಳೆ ಪ್ರಮಾಣಕ್ಕಿಂತ ಬಹಳ ಕಡಿಮೆ ಮಳೆಯಾಗಿದೆ.
64 ಶೇಕಡಾ ಮಳೆ ಕೊರತೆ :
ಮಾಹಿತಿಯ ಪ್ರಕಾರ, ಜೂನ್ 4ರಿಂದ ಜೂನ್ 15ರವರೆಗೆ ದೇಶದಲ್ಲಿ ಸುಮಾರು 53.7 ಮಿಮೀ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಕೇವಲ 19.2 ಮಿಮೀ ಮಳೆಯಷ್ಟೇ ದಾಖಲಾಗಿದ್ದು, ದೇಶಾದ್ಯಂತ ಸುಮಾರು “64 ಶೇಕಡಾ ಮಳೆ ಕೊರತೆ” ಉಂಟಾಗಿದೆ ಎನ್ನಲಾಗಿದೆ. ಇದು ರೈತ ಸಮುದಾಯದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಉಪಗ್ರಹ ಚಿತ್ರಗಳಲ್ಲೂ ಅಸಾಮಾನ್ಯ ಪರಿಸ್ಥಿತಿ ಗೋಚರಿಸಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಭಾರತದ ದಕ್ಷಿಣ ಹಾಗೂ ಮಧ್ಯ ಭಾಗಗಳಲ್ಲಿ ದಟ್ಟ ಮೋಡಗಳು ಕಾಣಿಸಿಕೊಳ್ಳಬೇಕಾದರೆ, ಈಗ ಆಕಾಶ ಬಹುತೇಕ ಸ್ಪಷ್ಟವಾಗಿ ಕಂಡುಬರುತ್ತಿದೆ. ಮೋಡಗಳ ಚಟುವಟಿಕೆ ಕೆಲ ಉತ್ತರ ಹಾಗೂ ಈಶಾನ್ಯ ಭಾಗಗಳಿಗೆ ಮಾತ್ರ ಸೀಮಿತವಾಗಿರುವುದು ಗಮನ ಸೆಳೆದಿದೆ.
ಹವಾಮಾನ ತಜ್ಞರ ಪ್ರಕಾರ, ಸಮುದ್ರದಲ್ಲಿ ತೇವಾಂಶದ ಕೊರತೆ ಇಲ್ಲದಿದ್ದರೂ ಕೂಡ ವಾತಾವರಣದ ಮೇಲ್ಭಾಗದಲ್ಲಿ ಗಾಳಿಯ ದಿಕ್ಕು ಹಾಗೂ ವೇಗದಲ್ಲಿ ಉಂಟಾದ ಬದಲಾವಣೆಗಳಿಂದ ಮಾನ್ಸೂನ್ ಮಾರುತಗಳ ಚಲನೆ ಅಸ್ತವ್ಯಸ್ತವಾಗಿದೆ.
ವಿಶೇಷವಾಗಿ ಪಶ್ಚಿಮದಿಂದ ಬೀಸುತ್ತಿರುವ ಗಾಳಿಯ ಪ್ರಭಾವ ಹೆಚ್ಚಿರುವುದರಿಂದ ಮೋಡಗಳ ರಚನೆ ಪ್ರಕ್ರಿಯೆ ಕುಂಠಿತವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಚಟುವಟಿಕೆ ಕಡಿಮೆಯಾಗಿರುವುದು ಇದೇ ಕಾರಣಕ್ಕೆ ಎನ್ನಲಾಗುತ್ತಿದೆ.
ತಾತ್ಕಾಲಿಕ ಮುಂಗಾರು ವಿರಾಮ:
ಆದರೆ ತಜ್ಞರ ಪ್ರಕಾರ ಇದು “ತಾತ್ಕಾಲಿಕ ಮಾನ್ಸೂನ್ ವಿರಾಮ” ಮಾತ್ರವಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ವಾತಾವರಣ ಮತ್ತೆ ಅನುಕೂಲಕರವಾಗಿ ಬದಲಾಗುವ ಸಾಧ್ಯತೆ ಇದೆ.
ಈ ವಾರದ ಅಂತ್ಯದ ವೇಳೆಗೆ ಮುಂಗಾರು ಮರುಸಕ್ರಿಯಗೊಂಡು ಮಳೆಯ ಪ್ರಮಾಣ ಮತ್ತೆ ಏರಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ಹೊಸ ನಿರೀಕ್ಷೆ ಮೂಡಿದೆ.
ಮುಂಗಾರು ಮಳೆ :
- ಮುಂಗಾರು ಮಳೆ ಎಂದರೆ ವರ್ಷದಲ್ಲಿ ನಿರ್ದಿಷ್ಟ ಅವಧಿಯಲ್ಲಿ ಸಮುದ್ರದಿಂದ ಭೂಭಾಗದತ್ತ ಬೀಸುವ ತೇವಾಂಶಯುಕ್ತ ಗಾಳಿಗಳ ಪರಿಣಾಮವಾಗಿ ಸುರಿಯುವ ಮಳೆ.
- ಭಾರತದಲ್ಲಿ ಸಾಮಾನ್ಯವಾಗಿ ಜೂನ್ನಿಂದ ಸೆಪ್ಟೆಂಬರ್ವರೆಗೆ ಬೀಸುವ ನೈಋತ್ಯ ಮುಂಗಾರುದೇಶದ ಬಹುಪಾಲು ಕೃಷಿಗೆ ಜೀವನಾಡಿಯಾಗಿರುತ್ತದೆ.
- ಈ ಮಳೆಯೇ ಜಲಾಶಯಗಳು ತುಂಬಲು, ಬೆಳೆ ಬೆಳೆಯಲು ಹಾಗೂ ಕುಡಿಯುವ ನೀರಿನ ಲಭ್ಯತೆಗೆ ಪ್ರಮುಖ ಆಧಾರವಾಗಿದೆ. ಮುಂಗಾರು ದುರ್ಬಲವಾದರೆ ಕೃಷಿ, ಆರ್ಥಿಕತೆ ಮತ್ತು ದೈನಂದಿನ ಜೀವನದ ಮೇಲೂ ದೊಡ್ಡ ಪರಿಣಾಮ ಬೀರುತ್ತದೆ.
ಕರ್ನಾಟಕದಲ್ಲಿ ಜೂನ್ 1 – 15ರವರೆಗೆ ಪ್ರದೇಶವಾರು ಅಂದಾಜು ಮಳೆ ಹೀಗಿದೆ:
ಸಾಮಾನ್ಯವಾಗಿ (ಸರಾಸರಿ) ದಾಖಲಾಗುವ ಪ್ರದೇಶವಾರು ಮಳೆ ಪ್ರಮಾಣ :
- ಕರಾವಳಿ ಕರ್ನಾಟಕ (ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ) → 250 ಮಿಮೀ – 450 ಮಿಮೀ.
- ಮಲೆನಾಡು ಪ್ರದೇಶ (ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಭಾಗ) → 180 ಮಿಮೀ – 350 ಮಿಮೀ.
- ದಕ್ಷಿಣ ಒಳನಾಡು (ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಕೋಲಾರ) → 60 ಮಿಮೀ – 130 ಮಿಮೀ.
- ಉತ್ತರ ಒಳನಾಡು (ಬೆಳಗಾವಿ, ಧಾರವಾಡ, ವಿಜಯಪುರ, ಗದಗ, ಬಾಗಲಕೋಟೆ) → 50 ಮಿಮೀ – 110 ಮಿಮೀ.
- ಕಲ್ಯಾಣ ಕರ್ನಾಟಕ (ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ) → 40 ಮಿಮೀ – 90 ಮಿಮೀ.
ಒಟ್ಟಾರೆ ಕರ್ನಾಟಕ ರಾಜ್ಯದ ಜೂನ್ 1–15 ಅವಧಿಯ ಸರಾಸರಿ ಮಳೆ:
ಸುಮಾರು 95 ಮಿಮೀ – 140 ಮಿಮೀ ನಡುವೆ ದಾಖಲಾಗುವುದು ಸಾಮಾನ್ಯ.
ಈ ವರ್ಷ (ಜೂನ್ 2026) ದ ಪ್ರದೇಶವಾರು ಮಳೆ ಪ್ರಮಾಣ :
- ಕರಾವಳಿ ಕರ್ನಾಟಕ (ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ) → 180 – 320 ಮಿಮೀ (ಕೆಲವೆಡೆ ಉತ್ತಮ ಮಳೆ, ಕೆಲವೆಡೆ ಕಡಿಮೆ)
- ಮಲೆನಾಡು (ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ) ➝ 120 – 220 ಮಿಮೀ (ಸಾಮಾನ್ಯಕ್ಕಿಂತ ಕಡಿಮೆ ಮಳೆ)
- ದಕ್ಷಿಣ ಒಳನಾಡು (ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಕೋಲಾರ) ➝ 35 – 75 ಮಿಮೀ (ನಿರೀಕ್ಷೆಗಿಂತ ಕಡಿಮೆ)
- ಉತ್ತರ ಒಳನಾಡು (ಬೆಳಗಾವಿ, ಧಾರವಾಡ, ವಿಜಯಪುರ, ಗದಗ, ಬಾಗಲಕೋಟೆ) ➝ 20 – 60 ಮಿಮೀ (ಹಲವೆಡೆ ಮಳೆ ಕೊರತೆ)
- ಕಲ್ಯಾಣ ಕರ್ನಾಟಕ (ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ) ➝ 15 – 45 ಮಿಮೀ (ತೀವ್ರ ಮಳೆ ಕೊರತೆ)
ಒಟ್ಟಾರೆ ಕರ್ನಾಟಕದ ಸ್ಥಿತಿ (ಜೂನ್ 1 – 15):
- ಸಾಮಾನ್ಯವಾಗಿ ಆಗಬೇಕಾದ ಮಳೆ : 100 – 140 ಮಿಮೀ.
- ಈ ವರ್ಷ ದಾಖಲಾಗಿರುವ ಅಂದಾಜು ಮಳೆ : 55 – 85 ಮಿಮೀ.
- ಒಟ್ಟಾರೆ ಮಳೆ ಕೊರತೆ : ಸುಮಾರು 35% – 45%
“ಜೂನ್ ಮೊದಲಾರ್ಧದಲ್ಲಿ ಕರ್ನಾಟಕದಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದ್ದರೂ, ಈ ಬಾರಿ ಮುಂಗಾರು ದುರ್ಬಲಗೊಂಡ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ 40%ರವರೆಗೆ ಮಳೆ ಕೊರತೆ ಕಂಡುಬಂದಿದೆ.”
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ







